ಕೆ.ಎನ್.ಪಿ.ವಾರ್ತೆ,ಧಾರವಾಡ,ಆ.19;
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅನುಮತಿ ಇಲ್ಲದೆ ಮರಗಳಿಗೆ ಅನೇಕ ರೀತಿಯ ಜಾಹೀರಾತು ಫಲಕ, ಪೋಸ್ಟರ್, ಬ್ಯಾನರ್ ಗಳನ್ನು ಅಳವಡಿಸಲಾಗುತ್ತಿದೆ. ಇದು ಮರಗಳ ಬೆಳವಣಿಗೆ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುತ್ತಿದೆ. ಅರಣ್ಯ ಹಾಗೂ ಪಾಲಿಕೆ ಕಾಯ್ದೆ ಅನ್ವಯ ಜಾಹೀರಾತಿನಲ್ಲಿ ಕಾಣಿಸಿರುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಶಿಕ್ಷೆ ವಿಧಿಸಲಾಗುವುದು ಎಂದು ಧಾರವಾಡ ವಲಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ವ್ಹಿ. ಮಂಜುನಾಥ ಹೇಳಿದರು.
ಕೆಸಿಡಿ ವೃತ್ತದಲ್ಲಿ ಮರಗಳಿಗೆ ಅಳವಡಿಸಿದ ಜಾಹೀರಾತುಗಳನ್ನು ತೆರುವುಗೊಳಿಸುವ ಮೂಲಕ ಜಾಹೀರಾತು ಮುಕ್ತ ಮರ, ಗಿಡ ಅಭಿಯಾನಕ್ಕೆ ಚಾಲನೆ ನೀಡಿದರು.
ನೈಸರ್ಗಿಕವಾಗಿ ಗಾಳಿ, ನೀರು, ಬೆಳಕು ಪಡೆದು ಸ್ವಚ್ಚಂದವಾಗಿ ಬೆಳೆಯಬೇಕಾದ ಗಿಡ ಮರಗಳಿಗೆ ಕಂಬಿ ಕಟ್ಟುವ, ಹಗ್ಗ-ತಂತಿ ಬಿಗಿಯುವ ಮತ್ತು ಮೊಳೆ ಹೊಡೆಯುವ, ರೆಂಬೆ, ಕೊಂಬೆ, ಟೊಂಗೆಗಳನ್ನು ಕತ್ತರಿಸುವ ಮೂಲಕ ಅನೇಕ ರೀತಿಯ ಜಾಹೀರಾತುಗಳನ್ನು ನೇತು ಬಿಡಲಾಗುತ್ತಿದೆ. ಇದರಿಂದ ಅವುಗಳ ಬೆಳವಣಿಗೆ ಕುಂಠಿತವಾಗಿ ರೋಗಗಳಿಗೆ ತುತ್ತಾಗುತ್ತವೆ ಮತ್ತು ಮುಂದೊಂದು ದಿನ ಆ ಮರಗಳೇ ಸತ್ತು ಹೊಗುತ್ತವೆ.
ಅರಣ್ಯ, ಮರಗಳ ಸಂಖ್ಯೆ ಕಡಿಮೆ ಆಗಿರುವದರಿಂದ ಪ್ರಕೃತಿ ವಿಕೋಪ ಉಂಟಾಗುತ್ತಿದೆ. ಇದರಿಂದ ಜೀವ ಸಂಕುಲ ಅಪಾಯಕ್ಕೆ ಸಿಲುಕಿದೆ. ಆದ್ದರಿಂದ ಯಾವುದೇ ಪೂರ್ವಾನುಮತಿ ಹಾಗೂ ಪರವಾನಿಗೆ ಇಲ್ಲದೆ ಇನ್ನು ಮುಂದೆ ಮರಗಳಿಗೆ ಜಾಹೀರಾತು ಅಂಟಿಸಿದರೆ ಅಥವಾ ಅಳವಡಿಸಿದರೆ ಅಂತವರ ವಿರುದ್ಧ ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ ಎಂದು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ಮಹೇಶಕುಮಾರ ಮಾತನಾಡಿ, ಆಗಸ್ಟ್ 15 ರಿಂದ ಹಸಿರು ಕರ್ನಾಟಕ ಯೋಜನೆಯಲ್ಲಿ ಸಸಿಗಳನ್ನು ಜಿಲ್ಲೆಯಾದ್ಯಾಂತ ನೆಡಲಾಗುತ್ತಿದೆ. ಈಗ ವಿವಿಧ ಸಂಘ ಸಂಸ್ಥೆ ಮತ್ತು ಮಹಾನಗರ ಪಾಲಿಕೆ ಸಹಯೋಗದಲ್ಲಿ ನಗರ ವ್ಯಾಪ್ತಿಯಲ್ಲಿರುವ ಮರಗಳಿಗೆ ಅನಧಿಕೃತವಾಗಿ ಅಳವಡಿಸಿರುವ ಎಲ್ಲ ರೀತಿಯ ಜಾಹೀರಾತುಗಳನ್ನು ತೆರವುಗೊಳಿಸುವ ಕಾರ್ಯ ಆರಂಭಿಸಲಾಗಿದೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಮತ್ತು ಜಾಹೀರಾತುದಾರರು ಬೇಕಾಬಿಟ್ಟಿಯಾಗಿ ಪರವಾನಿಗೆ ಇಲ್ಲದೆ ಮರಗಳಿಗೆ ಜಾಹೀರಾತು ಅಳವಡಿಸಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ನೆಚರ್ ಪಸ್ಟ್ ಸಂಸ್ಥೆಯ ಮುಖ್ಯಸ್ಥ ಪಿ.ವ್ಹಿ. ಹಿರೇಮಠ ಅವರು ಮಾತನಾಡಿ, ಆಗಸ್ಟ್ 18 ರಿಂದ 10 ದಿನಗಳ ಕಾಲ ವಿವಿಧ ಸಂಘ, ಸಂಸ್ಥೆ ಪಾಲಿಕೆ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಹಯೋಗದಲ್ಲಿ ನಗರದ ಪ್ರತಿ ಮರದ ಮೇಲೆ ಅಳವಡಿಸಿರುವ ಜಾಹೀರಾತುಗಳನ್ನು ತೆರವುಗೊಳಿಸಲಾಗುವುದು.
ನಾಲ್ಕು ಜನರ ತಂಡ ರಚಿಸಿ, ಪ್ರತಿ ತಂಡದಿಂದ ಪ್ರತಿಯೊಂದು ಓಣಿಗೆ ತೆರಳಿ ಮರಗಳನ್ನು ಸ್ವಚ್ಚಗೊಳಿಸಲಾಗುವುದು ಮತ್ತು ಮರಗಳಿಗೆ ಅಳವಡಿಸಿರುವ ಜಾಹೀರಾತು ಫಲಕ, ಬ್ಯಾನರ್, ಹಗ್ಗ, ತಂತಿಗಳನ್ನು ತೆಗೆದು ಅರಣ್ಯ ಇಲಾಖೆಗೆ ಒಪ್ಪಿಸಲಾಗುವುದು. ನಗರದ ಅಂದ ಹೆಚ್ಚಿಸಲು ಎಲ್ಲರ ಸಹಕಾರ ಮುಖ್ಯ ಎಂದು ಹೇಳಿದರು.
ಈ ವೇಳೆ ಪಾಲಿಕೆಯ ಸಹಾಯಕ ಆಯುಕ್ತ ರಂಜಿತಕುಮಾರ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಪ್ರಕಾಶ ಗೌಡರ ಪಾಲ್ಗೊಂಡಿದ್ದರು.
ವರದಿ : ಚಂದ್ರು ಹಿರೇಮಠ ಧಾರವಾಡ
ಆತ್ಮೀಯರೇ ಕೆ.ಎನ್.ಪಿ.ಗೆ ಸಬ್ ಸ್ಕ್ರೈಬ್ ಆಗಲು ತಪ್ಪದೇ ಬೆಲ್ ಬಟನ್ ಒತ್ತಿರಿ…
ನೀವು ಕೂಡ ಬರೆಯಬಹುದು :
ಆತ್ಮೀಯರೇ, ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರ, ಕತೆ, ಕವನ, ಲೇಖನ, ಜೀವನ ಚರಿತ್ರೆ, ಚುಟುಕು, ಹೀಗೆ ಯಾವುದೇ ಪ್ರಕಾರವಾಗಲಿ ಬರೆದು, ಆಸಕ್ತರು ನಿಮ್ಮ ಬರಹವನ್ನು ಪೋಟೋ ಸಮೇತ ಕೆ.ಎನ್.ಪಿ ಗೆ ಕಳುಹಿಸಬಹುದಾಗಿದೆ.
ಈ-ವಿಳಾಸ : karnatakanewsportal@gmail.com
ಕೆ.ಎನ್.ಪಿ.ಯ ಸಾಮಾಜಿಕ ಜಾಲತಾಣಗಳ ಲಿಂಕ್ ಕೆಳಗೆ ನೀಡಲಾಗಿದೆ ಒಮ್ಮೆ ಓಪನ್ ಮಾಡಿ, ಲೈಕ್ ಮಾಡಿ, ಸಬ್ ಸ್ಕ್ರೈಬ್ ಮಾಡಿ, ಕಮೆಂಟ್ ಮತ್ತು ಶೇರ್ ಮಾಡಿರಿ.